ಕೊಪ್ಪಳ ಸುದ್ದಿ

ಜಿಲ್ಲಾಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮುಕ್ತ ಕ್ರಮಕ್ಕೆ ರಮೇಶ ಕಾಳೆ ಆಗ್ರಹ

ಜಿಲ್ಲಾಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮುಕ್ತ ಕ್ರಮಕ್ಕೆ ರಮೇಶ ಕಾಳೆ ಆಗ್ರಹ

ಕೊಪ್ಪಳ; ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಲವು ಅಕ್ರಮ ರೆಸಾರ್ಟ್‍ಗಳಲ್ಲಿ ನಡೆಯುತ್ತಿರುವ ಅನೈತಿಕ, ಅಕ್ರಮ ಹಾಗೂ ಗಂಭೀರ ಸ್ವರೂಪದ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಸಂತೋಷದ ಸಂಗತಿ. ಆದರೆ ಅಕ್ರಮ ರೆಸಾರ್ಟ್‍ಗಳ ಕಡಿವಾಣಕ್ಕೆ ಕೆಲ ಜನಪ್ರತಿನಿಧಿಗಳು ಅಡ್ಡಿಪಡಿಸುತ್ತಿದ್ದು ಜಿಲ್ಲಾಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪಗಳಿವೆ. ಜಿಲ್ಲಾಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಮುಕ್ತವಾಗಬೇಕು ಎಂದು ಕರ್ನಾಟಕ ಜನಸೈನೆ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕಾಳೆ ಒತ್ತಾಯಿಸಿದ್ದಾರೆ.

ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಅನೇಕ ರೆಸಾರ್ಟ್‍ಗಳಲ್ಲಿ ಅನುಮತಿ ಇಲ್ಲದೆ ತಡರಾತ್ರಿಯವರೆಗೆ ಪಾರ್ಟಿ ಮಾಡುವುದು, ಮಾದಕ ದ್ರವ್ಯಗಳ ಬಳಕೆ, ಅಕ್ರಮ ಮದ್ಯ ಮಾರಾಟ ಮತ್ತು ಧ್ವನಿವರ್ಧಕಗಳ ಬಳಕೆಯಿಂದ ಪರಿಸರ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ. ಅನೇಕ ರೆಸಾರ್ಟ್‍ಗಳು ಪರವಾನಗಿ ಪಡೆಯದೆ ಅಥವಾ ನಿಯಮಗಳನ್ನು ಗಾಳಿಗೆ ತೂರಿ ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿವೆ. ಜಿಲ್ಲಾಡಳಿತವು ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಸ್ಥಳೀಯ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಇದು ಕಾನೂನು ಸುವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಕುಗ್ಗಿಸುತ್ತಿದೆ. ಆದ್ದರಿಂದ ಕೂಡಲೇ ಅಕ್ರಮ ಚಟುವಟಿಕೆ ನಡೆಸುವ ರೆಸಾರ್ಟ್‍ಗಳ ಮೇಲೆ ತಕ್ಷಣವೇ ದಾಳಿ ನಡೆಸಿ, ಅವುಗಳ ಪರವಾನಗಿ ರದ್ದುಗೊಳಿಸಬೇಕು. ಕಾನೂನು ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ಬಾಹ್ಯ ಒತ್ತಡ ಅಥವಾ ಹಸ್ತಕ್ಷೇಪಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಪ್ರತಿ ರೆಸಾರ್ಟ್‍ನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ಇಡಲು ಒಂದು ವಿಶೇಷ ಕಾರ್ಯಪಡೆಯನ್ನು (ಖಿಚಿsಞ ಈoಡಿಛಿe) ರಚಿಸಬೇಕು. ಜಿಲ್ಲೆಯ ಶಾಂತಿ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡುವ ಹಿತದೃಷ್ಟಿಯಿಂದ ತಾವು ಈ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button