
“ಪ್ರಕೃತಿಯ ಸೊಬಗು,ಕೊಟ್ಟಷ್ಟೂ ವೃದ್ಧಿಯಾಗುವ ಜೀವನದ ಸತ್ಯ”
ಮರ ಗಿಡಗಳು ತಾವು ಬೆಳೆದ ಹಣ್ಣನ್ನು ತಾವೇ ತಿನ್ನುವುದಿಲ್ಲ.
ಹಸುಗಳು ತಮ್ಮ ಹಾಲನ್ನು ತಾವೇ ಕುಡಿಯುವುದಿಲ್ಲ.
ಸುಗಂಧಭರಿತ ಹೂ ಬಿಡುವ ಬಳ್ಳಿ ತನ್ನ ಹೂವನ್ನು ತಾನೇ ಮುಡಿದುಕೊಳ್ಳುವುದಿಲ್ಲ.ನದಿಗಳು ತಮ್ಮ ನೀರನ್ನು ತಾವೇ ಕುಡಿಯುವುದಿಲ್ಲ,ಅವು ದಣಿದವರ ದಾಹ ತೀರಿಸುತ್ತವೆ.ದೀಪವು ತಾನುರಿದು ಕತ್ತಲಿಗೆ ಬೆಳಕು ನೀಡುತ್ತದೆ.ಮೋಡವು ಮಳೆ ಸುರಿಸಿ ಬರಡು ನೆಲಕ್ಕೆ ಜೀವ ತುಂಬುತ್ತದೆ.ಇವುಗಳೆಲ್ಲ ಪ್ರಕೃತಿಯ ಮೌನ ಪಾಠಗಳು.
“ಕೊಡುವುದೇ ನಿಜವಾದ ಬದುಕು” ಎಂಬ ಸಂದೇಶವನ್ನು ಸಾರುತ್ತಿವೆ.
ಪ್ರಕೃತಿಯಲ್ಲಿರುವ ಪ್ರತಿಯೊಂದು ಅಂಶವೂ ತನ್ನದನ್ನು ತನ್ನೊಳಗೆ ಬಂಧಿಸಿಕೊಳ್ಳುವುದಿಲ್ಲ. ಅದು ಹಂಚಿಕೊಳ್ಳುತ್ತದೆ, ಹರಡುತ್ತದೆ, ಜೀವಕ್ಕೆ ಜೀವ ನೀಡುತ್ತದೆ. ಅದಕ್ಕಾಗಿಯೇ ಪ್ರಕೃತಿ ಎಂದಿಗೂ ಖಾಲಿಯಾಗುವುದಿಲ್ಲ.
ಅದರಲ್ಲಿರುವ ಖಜಾನೆ ಕೊಟ್ಟಷ್ಟೂ ಹೆಚ್ಚಾಗುತ್ತದೆ. ಏಕೆಂದರೆ ಅದು ‘ನನ್ನದು’ ಎಂದು ಹಿಡಿದುಕೊಳ್ಳುವುದಿಲ್ಲ, ‘ಎಲ್ಲರದ್ದು’ ಎಂದು ಹಂಚುತ್ತದೆ.ಆದರೆ ಮನುಷ್ಯನು ಮಾತ್ರ ವಿಭಿನ್ನ. ಅವನು ಸಿಕ್ಕಿದ ಪ್ರತಿಯೊಂದನ್ನೂ ತನ್ನದೇ ಎಂದುಕೊಂಡು, ತನ್ನೊಳಗೆ ಸಂಗ್ರಹಿಸಿಕೊಳ್ಳಲು ಯತ್ನಿಸುತ್ತಾನೆ. ಹೆಚ್ಚು ಪಡೆದುಕೊಳ್ಳುವುದೇ ಸಂತೋಷ ಎಂದು ಭಾವಿಸುತ್ತಾನೆ. ಆದರೆ ನಿಜವಾದ ಸಂತೋಷ ಕೊಡುವುದರಲ್ಲಿ ಇದೆ ಎಂಬುದನ್ನು ಮರೆಯುತ್ತಾನೆ. ಹೀಗೆ ಸ್ವಾರ್ಥದಿಂದ ಬದುಕಿದಾಗ, ಕೊನೆಗೆ ಅವನ ಕೈಯೂ ಖಾಲಿಯಾಗುತ್ತದೆ, ಮನಸ್ಸೂ ಖಾಲಿಯಾಗುತ್ತದೆ.
ನಾವು ಗಮನಿಸಬೇಕಾದ ಒಂದು ಮಹತ್ವದ ಸಂಗತಿ ಏನೆಂದರೆ ಹಣ್ಣು ಕೊಡೋ ಮರಕ್ಕೆ ಕಲ್ಲೇಟು ಬಿದ್ದರೂ ಅದು ಹಣ್ಣನ್ನೇ ಕೊಡುತ್ತದೆ. ಹಾಲು ಕೊಡೋ ಹಸು ಏಟು ತಿಂದರೂ ಹಾಲನ್ನೇ ಕೊಡುತ್ತದೆ. ಪ್ರಕೃತಿಯ ಧರ್ಮವೇ ಇದು — ತಾನು ನೋವು ಅನುಭವಿಸಿದರೂ, ಇತರರಿಗೆ ಉಪಕಾರ ಮಾಡುವುದು. ಈ ಮಹತ್ವದ ಗುಣವೇ ಪ್ರಕೃತಿಯನ್ನು ಶ್ರೇಷ್ಠವಾಗಿಸುತ್ತದೆ.
ನಮ್ಮ ಜೀವನದಲ್ಲಿಯೂ ಇದೇ ಪಾಠ ಅನ್ವಯಿಸುತ್ತದೆ. ನಾವು ಹೊಂದಿರುವ ಜ್ಞಾನ, ಪ್ರೀತಿ, ಸಹಾಯ, ಸಂಪತ್ತು ಇವುಗಳನ್ನು ಇತರರೊಂದಿಗೆ ಹಂಚಿಕೊಂಡಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುತ್ತದೆ. ಒಂದು ಸಣ್ಣ ಸಹಾಯವೂ ಯಾರಾದರೊಬ್ಬರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಹುದು. ನಾವು ಕೊಡುವುದು ಕೇವಲ ವಸ್ತುಗಳಷ್ಟೇ ಅಲ್ಲ, ನಮ್ಮ ಸಮಯ, ನಮ್ಮ ಕಾಳಜಿ, ನಮ್ಮ ಮಮತೆ ಕೂಡಾ ಆಗಿರಬಹುದು.
“ಕೊಟ್ಟಷ್ಟೂ ಖಾಲಿಯಾಗುವುದಿಲ್ಲ” ಎಂಬುದು ಕೇವಲ ಮಾತಲ್ಲ ಅದು ಜೀವನದ ಸತ್ಯ. ಒಳ್ಳೆಯದನ್ನು ಹಂಚಿದಷ್ಟೂ ಅದು ಹಲವು ರೂಪಗಳಲ್ಲಿ ನಮ್ಮತ್ತಲೇ ಮರಳಿ ಬರುತ್ತದೆ. ಗೌರವವಾಗಿ, ಪ್ರೀತಿಯಾಗಿ, ಸಂತೋಷವಾಗಿ ಅಥವಾ ಆತ್ಮಸಂತೃಪ್ತಿಯಾಗಿ.
ಆದ್ದರಿಂದ, ನಾವು ಪ್ರಕೃತಿಯಂತಾಗಲು ಪ್ರಯತ್ನಿಸೋಣ. ಸ್ವಲ್ಪವಾದರೂ ನಮ್ಮಲ್ಲಿರುವುದನ್ನು ಹಂಚಿಕೊಳ್ಳೋಣ. ಪರೋಪಕಾರದ ಮನೋಭಾವ ಬೆಳೆಸೋಣ. ‘ನನ್ನದು’ ಎಂಬ ಸೀಮೆಯನ್ನು ಮೀರಿ ‘ನಮ್ಮದು’ ಎಂಬ ವಿಶ್ವದೃಷ್ಟಿಯನ್ನು ಅಳವಡಿಸೋಣ.
ಕೊನೆಗೆ, ಜೀವನದ ನಿಜವಾದ ಸೌಂದರ್ಯ ನಾವು ಏನು ಸಂಗ್ರಹಿಸಿದ್ದೇವೆ ಎಂಬುದರಲ್ಲಿ ಅಲ್ಲ, ನಾವು ಎಷ್ಟು ಹಂಚಿಕೊಂಡಿದ್ದೇವೆ ಎಂಬುದರಲ್ಲಿ ಇದೆ.
ಪ್ರಕೃತಿಯ ಪಾಠ ಸ್ಪಷ್ಟ — ಕೊಟ್ಟಷ್ಟೂ ಜೀವನ ಶ್ರೀಮಂತವಾಗುತ್ತದೆ.
ಲೇಖನ – ಆಂಜನೇಯ ಮಟ್ಟೂರು.
ಶಿಕ್ಷಕರು. ಗಂಗಾವತಿ


