ಬಲ್ಡೋಟ ಹಟಾವೋ, ಜೀವ ಉಳಿಸಿಕೊಳ್ಳುವ ಹೋರಾಟ: ಸಿದ್ದನಗೌಡ ಪಾಟೀಲ್

ಬಲ್ಡೋಟ ಹಟಾವೋ, ಜೀವ ಉಳಿಸಿಕೊಳ್ಳುವ ಹೋರಾಟ: ಸಿದ್ದನಗೌಡ ಪಾಟೀಲ್
ಕೊಪ್ಪಳ: ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಸಿರುವ 125ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಬೆಂಬಲಿಸಿ ಬೆಂಗಳೂರು ವೈಚಾರಿಕ ಮಾಸಿಕ ‘ಹೊಸತು’ ಪತ್ರಿಕೆಯ ಸಂಪಾದಕರಾದ ಸಿದ್ದನಗೌಡ ಪಾಟೀಲ್ ಅವರು ಕಾರ್ಖಾನೆ ಬಾಧಿತ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ, 125ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು. ಇಷ್ಟೊಂದು ಸುದೀರ್ಘ ಕಾಲದಿಂದ ಹೋರಾಟ ಮಾಡುವದು ಸಣ್ಣ ಸಂಗತಿಯಲ್ಲ. ಇಲ್ಲಿ ನಡೆಸಿರುವ ಹೋರಾಟ ಪರಿಸರ ಸಾಮಾಜಿಕ, ಜೀವ ಕಳಕಳಿಯ ಹೋರಾಟವಾಗಿದೆ. ಕೊಪ್ಪಳ ಜನ ಬಲ್ಡೋಟ ವಿಸ್ತರಣೆಯಿಂದಾಗುವ ಅಪಾಯ ಮೊದಲೇ ಕಂಡುಕೊಂಡಿದ್ದೀರಿ. ಸಂಡೂರು ಸುತ್ತ ಮುತ್ತ ಜಿಂದಾಲ್ ಕಾರ್ಖಾನೆ ಮತ್ತು ಗಣಿಗಾರಿಕೆಯಿಂದ ಅಲ್ಲಿನ ಭೂಮಿ ಸಂಪೂರ್ಣ ಬಂಜರಾಗುತ್ತಿದೆ. ಅದರ ಸತ್ಯ ಕಂಡುಕೊಂಡು ಈ ನಿಮ್ಮ ಕೂಗನ್ನು ಸರ್ಕಾರಕ್ಕೆ, ಕಾರ್ಖಾನೆಗಳಿಗೆ ತಲುಪಿಸಿದ್ದೀರಿ.
- ವಿರೋಧ ಪಕ್ಷಗಳೂ ಕಾರ್ಪೊರೇಟ್ ಕಂಪನಿಗಳನ್ನುವಿರೋಧಿಸುತ್ತಿಲ್ಲ.

ಬಾಧಿತ ಪ್ರದೇಶದ ಪರಿಸರ ಹಾಳಾಗಿದೆ. ಜನರ ಆರೋಗ್ಯ ಹಾಳಾಗಿದೆ. ಈ ಪರಿಸ್ಥಿತಿಯಲ್ಲಿ ಉದ್ಯೋಗ ಕುರಿತು ಮಾತನಾಡುವುದು ಸೂಕ್ತವಲ್ಲ. ಜೀವ ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವ ಬಾಧಿತರ ನೆರವಿಗೆ ಎಲ್ಲ ವಲಯದ ಸಂಘಟನೆಗಳ, ಸಾಮಾಜಿಕ ಕಾರ್ಯಕರ್ತರು ಈ ಹೋರಾಟದಲ್ಲಿ ಧುಮುಕಬೇಕು.ರಾಜ್ಯದ ಪರಿಸರ ತಜ್ಞರು, ಆರೋಗ್ಯ ತಜ್ಞರನ್ನು, ಕೃಷಿ ತಜ್ಞರನ್ನು ಕರೆಸಿವಿಚಾರ ಸಂಕಿರಣ ನಡೆಸಬೇಕು ಎಂದು ಸಲಹೆ ನೀಡಿದರು.

ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಾವು ಸರ್ಕಾರದ ಮುಂದೆ ನಿಯೋಗ ಕರೆದುಕೊಂಡು ಹೋಗುವುದನ್ನು ಕಾಯುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಸರ್ವಪಕ್ಷದ ಮುಖಂಡರು ಇದಕ್ಕೆ ಮಹತ್ವ ಕೊಡಬೇಕು. ಯಾವುದೇ ಕಾರಣಕ್ಕೂ ಈ ಗಂಭೀರ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಬಾರದು ಎಂದರು. ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷರಾದ ಡಿ.ಎಚ್. ಪೂಜಾರ ಮಾತನಾಡಿದರು. ಧರಣಿಯಲ್ಲಿ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ವಿಜಯ ಮಹಾಂತೇಶ ಹಟ್ಟಿ, ಎಸ್.ಬಿ.ರಾಜೂರು, ಮೂಕಪ್ಪ ಮೇಸ್ತ್ರಿ ಬಸಾಪುರ, ಜಿ.ಬಿ.ಪಾಟೀಲ್, ಗಂಗಾಧರ ಖಾನಾಪೂರ, ರಾಜಶೇಖರ ಏಳುಬಾವಿ, ಎಸ್. ಮಹಾದೇವಪ್ಪ ಮಾವಿನಮಾಡು, ಬಸವರಾಜ ನರೇಗಲ್, ಶರಣು ಪಾಟೀಲ್, ವೈ. ಸತ್ಯನಾರಾಯಣ, ಗಂಗಮ್ಮ ಕೊಡೇಕಲ್ ಇದ್ದರು.




